ವಿಜಯಪುರ : ಸಿಎಂ ಯಡಿಯೂರಪ್ಪ ಅಧಿಕಾರಿದಲ್ಲಿ ಹೆಚ್ಚು ದಿನ ಮುಂದುವರೆಯುವುದಿಲ್ಲ ಎಂದು ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಇಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಬಿಎಸ್ವೈ ವಿರುದ್ಧದ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಫೇಸ್ಬುಕ್ ಮೂಲಕ ಯತ್ನಾಳ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ವ್ಯಾಮೋಹದ ಬಗ್ಗೆ ಟಾಂಗ್ ನೀಡಿದ್ದಾರೆ. ಯತ್ನಾಳ್ ಅವರ ಶಿಷ್ಯ ರಾಘವ ಅಣ್ಣಿಗೇರಿ ಮತ್ತು ಇತರರು ಮಾಡಿರುವ ಫೇಸ್ ಬುಕ್ ಪೋಸ್ಟ್ ಗಳನ್ನು ಯತ್ನಾಳ ಹೆಸರಿನಲ್ಲಿರುವ ಫೇಸ್ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿರುವುದು ಇದೀಗ ವ್ಯಾಪಕ ಚರ್ಚೆಗೆ ಗುರಿಯಾಗಿದೆ.

ರಾಘವ ಅಣ್ಣಿಗೇರಿ, ಅಪ್ಪನ ಹೆಸರಿಂದ ರಾಜ್ಯಭಾರ ಮಾಡುತ್ತಿರುವವರೇ ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ ಎಚ್ಚರ ಎಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಪತ್ರಿಕೆಯ ವರದಿಯೊಂದನ್ನು ಟ್ಯಾಗ್ ಮಾಡಿ, ವಿಜಯೇಂದ್ರ ಒಬ್ಬನೇ ಎಲ್ಲ ಚುನಾವಣೆಗಳನ್ನು ಗೆಲ್ಲಿಸುವುದಾದರೆ ವಿಜಯೇಂದ್ರ ನೇತೃತ್ವದಲ್ಲಿ ಎರಡೂ ಕ್ಷೇತ್ರ ಗೆಲ್ಲುತ್ತೇವೆ” ಎಂದು ಯಡಿಯೂರಪ್ಪ ಹೇಳಿಕೆ ನೀಡಿರುವ ಪತ್ರಿಕಾ ವರದಿಯನ್ನು ಈ ಪೋಸ್ಟ್ ಗೆ ಟ್ಯಾಗ್ ಮಾಡಿದ್ದಾರೆ.
ಬೈ ಎಲೆಕ್ಷನ್ ನಲ್ಲಿ ಎರಡೂ ಕ್ಷೇತ್ರಗಳನ್ನು ವಿಜಯೇಂದ್ರ ನೇತೃತ್ವದಲ್ಲಿ ಗೆಲ್ಲತ್ತೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆ ಯತ್ನಾಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.