ಬೆಂಗಳೂರು: ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ವಿಷಯವಿದ್ದು, ಇತ್ತೀಚೆಗೆ ಅದರ ಫೋಟೋ ವೈರಲ್ ಆಗಿದೆ. ಈ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜೊತೆಗೆ ಮಂತ್ರಾಲಯ ಸ್ವಾಮೀಜಿಗಳು ಸಹ ಈ ವಿಚಾರವಾಗಿ ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರಂತೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ ಸುರೇಶ್ ಕುಮಾರ್, ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡುವ ಪಾಠ ವೊಂದು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಪ್ರಕಟವಾಗಿರುವ ವಿಚಾರ ಇಂದು ಬಹಳ ಚರ್ಚೆಯಲ್ಲಿದೆ.
ಸ್ವತ: ಮಂತ್ರಾಲಯದ_ಪೂಜ್ಯ ಸ್ವಾಮೀಜಿಗಳು ನನಗೆ ದೂರವಾಣಿಯ ಮೂಲಕ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ತಿಳಿಸಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಪಠ್ಯಪುಸ್ತಕದ ಪರಿಷ್ಕರಣೆ ಆಗಿಲ್ಲ ಅಥವಾ ಹೊಸ ಪಾಠ ಸೇರಿಲ್ಲ ಎಂಬುದನ್ನು ಸ್ಪಷ್ಟ ಮಾಡಲು ಇಚ್ಚಿಸುತ್ತೇನೆ.
ಈ ಕೂಡಲೇ ಈ ಹಿಂದೆಯೇ ಆಗಿರುವ, ಆದರೆ ಈಗ ಬೆಳಕಿಗೆ ಬಂದಿರುವ ಈ ಪ್ರಮಾದವನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪೂಜ್ಯ ಮಂತ್ರಾಲಯದ ಸ್ವಾಮೀಜಿಗಳಿಗೆ ನಾನು ಮಾತು ಕೊಟ್ಟಿರುವುದನ್ನು ಈ ಮೂಲಕ ಎಲ್ಲರಿಗೂ ತಿಳಿಸುತ್ತಿದ್ದೇನೆ ಎಂದು ಪೋಸ್ಟ್ ನಲ್ಲಿ ಹಾಕಿದ್ದಾರೆ.