ಬೆಂಗಳೂರು : ಇಂದು ಬೆಳಗ್ಗೆ 8.30ರ ಸುಮಾರಿಗೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಚಾಕು ಇರಿದು ಭಯದ ವಾತಾವರಣವನ್ನೇ ಸೃಷ್ಟಿ ಮಾಡಿದ್ದ. ಆತನ ಹುಚ್ಚಾಟಕ್ಕೆ ಐದು ಜನ ಗಾಯಗೊಂಡು ಒಬ್ಬ ಸಾವನ್ನಪ್ಪಿದ್ದಾನೆ.
ಭಕ್ಷಿ ಗಾರ್ಡನ್ ನಿವಾಸಿ ಗಣೇಶ್ ಎಂಬಾತನೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ. ಇಂದು ಭಾನುವಾರವಾದ ಕಾರಣ ಬೆಳಗ್ಗೆ ಮಟನ್ ತರಲು ಮೈಸೂರು ರಸ್ತೆಯ ಮಟನ್ ಶಾಪ್ ಗೆ ಹೋಗಿದ್ದನಂತೆ. ಈ ವೇಳೆ ಆತನಿಗೆ ಅದೇನಾಯ್ತೊ ಏನೋ ಏಕಾಏಕಿ ಮಟನ್ ಶಾಪ್ ನಲ್ಲಿದ್ದ ಚಾಕು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಆನಂತರ ಚಾಕು ತೆಗೆದುಕೊಂಡು ರಸ್ತೆಗೆ ಬಂದ ಗಣೇಶ್ ಬಿನ್ನಿ ಮಿಲ್ ಬಳಿ ರಸ್ತೆಯಲ್ಲಿ ಒಬ್ಬ ಯುವಕನ ಎದೆಗೆ ಚಾಕು ಇರಿದಿದ್ದಾನೆ. ಚಾಕು ಇರಿದ ರಭಸಕ್ಕೆ ಆ ವ್ಯಕ್ತಿಗೆ ತೀವ್ರ ರಕ್ತಸ್ರಾವವಾಗಿದ್ದು, ಅಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ರಸ್ತೆಯಲ್ಲಿ ಮುಂದೆ ಸಾಗಿದ ಆರೋಪಿ ಗಣೇಶ್ ಐವರಿಗೆ ಚಾಕು ಇರಿದಿದ್ದಾನೆ. ಐವರು ಗಾಯಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಾಳೆ ಮಂಡಿಯಿಂದ ಸುಮಾರು ಒಂದೂವರೆ ಕಿ.ಮೀ ಸಾಗಿದ ಆಸಾಮಿ ರಸ್ತೆಯಲ್ಲಿ ಸಿಕ್ಕವರಿಗೆ ಇರಿದು ರಾದ್ದಾಂತ ಮಾಡಿದ್ದಾನೆ.
ವಿಚಾರ ತಿಳಿದ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಆನಂತರ ರಸ್ತೆಯಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ ಗಣೇಶನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳಕ್ಕೆ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಆರೋಪಿಯ ವಿಚಾರಣೆ ನಡೆಸಿದ್ದಾರೆ. ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಣೇಶನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಾಗೂ ಆರೋಪಿ ಮಾನಸಿಕ ಅಸ್ವಸ್ಥ ಎಂದು ಮನೆಯವರು ಮಾಹಿತಿ ನೀಡಿದ್ದು, ಆ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.