ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ದೇವಾಲಯದ ಆಭರಣಗಳ ಅವ್ಯವಹಾರ ಆರೋಪ ಕೇಳಿಬಂದಿತ್ತು. ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ ಹಾಗೂ ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರ ಮೇಲೆ ಸುಬ್ರಹ್ಮಣ್ಯದ ನಿವಾಸಿಯಾದ ಶ್ರೀನಾಥ್ ಟಿ.ಎಸ್. ಅವರು ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೋಲಿಸ್ ಅಧೀಕ್ಷಕರಿಗೆ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ದೂರು ನೀಡಿದ್ದರು. ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಇಂದು ಸ್ಪಷ್ಟನೆ ನೀಡಿದೆ.
ದೇವಸ್ಥಾನದ ಎಲ್ಲ ಆಭರಣಗಳು ಸುರಕ್ಷಿತವಾಗಿದ್ದು, ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಫಷ್ಟಪಡಿಸಲಾಗಿದೆ. ದೂರು ನೀಡಿದ ಶ್ರೀನಾಥ ಎನ್ನುವ ವ್ಯಕ್ತಿ ಕಳೆದ ವರ್ಷದವರೆಗೂ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಪೂಜೆಯ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ಭಕ್ತರೊಬ್ಬರಿಂದ ದಕ್ಷಿಣೆಗೆ ಪೀಡಿಸಿದ ಹಿನ್ನಲೆಯಲ್ಲಿ ಭಕ್ತರು ಶ್ರೀನಾಥ ವಿರುದ್ಧ ದೂರು ದಾಖಲಿಸಿದ್ದರು. ದೇವಸ್ಥಾನದ ವತಿಯಿಂದ ಈ ಬಗ್ಗೆ ತನಿಖೆ ಕೈಗೊಂಡಾಗ ಭಕ್ತರ ದೂರಿನಲ್ಲಿ ಸತ್ಯಾಂಶ ಇರುವುದು ಬೆಳಕಿಗೆ ಬಂದಿತ್ತು. ಈ ಕಾರಣಕ್ಕಾಗಿ ಶ್ರೀನಾಥ ಅವರನ್ನು ಸೇವಾ ಕಾರ್ಯಗಳಿಂದ ಉಚ್ಛಾಟಿಸಲಾಗಿತ್ತು. ಇದೇ ಕಾರಣಕ್ಕಾಗಿ ತನ್ನ ವೈಯುಕ್ತಿಕ ದ್ವೇಷ ಸಾಧನೆಗಾಗಿ ಈ ರೀತಿಯ ದೂರು ದಾಖಲಿಸಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ರವೀಂದ್ರ ಎಂ.ಎಚ್. ಸ್ಪಷ್ಟಪಡಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ಮೌಲ್ಯದ ವಜ್ರದ ಕಂಠಿಹಾರ, ಆಭರಣ, ಲಿಂಗ ದೇವರ ಬೆಳ್ಳಿಯ ಒಡವೆಗಳಲ್ಲಿ ಅವ್ಯವಹಾರವಾಗಿದೆ ಎಂದು ದೂರಿ ಈ ದೂರು ದಾಖಲಾಗಿತ್ತು. ವರ್ಷದ ಹಿಂದೆ ಈ ಬಗ್ಗೆ ದೇವಸ್ಥಾದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋನಪ್ಪ ಮಾನಾಡು ಎಂಬುವವರು ದೇವಸ್ಥಾನಕ್ಕೆ ಈ ವಸ್ತುಗಳ ಬಗ್ಗೆ ವಿವರ ನೀಡುವಂತೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ದೇವಸ್ಥಾನದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಶ್ರೀನಾಥ್ ಟಿ.ಎಸ್ ಈ ಒಡವೆಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.