ಶ್ರೀ ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ. ಕ್ರಿಯೇಶನ್ಸ್ ಮತ್ತು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ ಗೋವಿಂದ ಗೋವಿಂದ ಚಿತ್ರವು ತೆರೆಗೆ ಬರಲು ಸಿದ್ಧವಾಗಿದೆ.
ಮೊನ್ನೆಯಷ್ಟೇ ಸೆನ್ಸಾರ್ ನವರು ಸಿನಿಮಾ ನೋಡಿ, ಯಾವುದೇ ಕಟ್ ಅಥವಾ ಬೀಪ್ ಇಲ್ಲದೆ ಸಿನಿಮಾಗೆ ಯು ಪ್ರಮಾಣ ಪತ್ರ ನೀಡಿದ್ದು, ಸೆನ್ಸಾರ್ ಮಂಡಳಿಯ ಸದಸ್ಯರು ಸಹ ಸಿನಿಮಾವನ್ನು ಒಂದು ಸದಭಿರುಚಿಯ ಕೌಟುಂಬಿಕ ಹಾಸ್ಯ ಭರಿತ ರೋಚಕ ಚಿತ್ರ ಎಂದು ಶ್ಲಾಘಿಸಿದ್ದಾರೆ.
ಹಾಸ್ಯಚಿತ್ರ ಮಾಡುವುದು ಬಹಳ ಕಷ್ಟ, ಅದರಲ್ಲೂ ಕ್ಲೀನ್ ಕಾಮಿಡಿ ಮಾಡೋದು ಇನ್ನೂ ಕಷ್ಟ, ಸೆನ್ಸಾರ್ ನವರು ನಮ್ಮ ಚಿತ್ರಕ್ಕೆ ಯಾವುದೇ ಬದಲಾವಣೆ ಇಲ್ಲದೇ ಯು ಸರ್ಟಿಫಿಕೇಟ್ ನೀಡಿರುವುದು ನಮ್ಮ ಈ ಪ್ರಯತ್ನಕ್ಕೆ ದೊರೆತಂತ ಮೊದಲ ಜಯ. ಈ ಚಿತ್ರವನ್ನು ಕುಟುಂಬದವರೆಲ್ಲಾ ಯಾವುದೇ ಮುಜುಗರವಿಲ್ಲದೆ ನೋಡಿ ಆನಂದಿಸಬಹುದು. ಮಕ್ಕಳು, ಹಿರಿಯರು, ಕಿರಿಯರು, ಮಹಿಳೆಯರು, ಯುವಕರು ಒಟ್ಟಾಗಿ ನೋಡಿ ಆನಂದಿಸುವ ಚಿತ್ರ ನಮ್ಮದು ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ರವಿ.ಆರ್.ಗರಣಿ.
ಸೆನ್ಸಾರ್ ನವರು ಹಾಡಿ ಹೊಗಳಿದ ಚಿತ್ರವನ್ನು ನಿರ್ಮಾಪಕರು ಹಾಗು ಅವರ ಕುಟುಂಬದವರು ಕೂಡಲೇ ನೋಡಬೇಕು ಎಂದು ಆಸೆ ಪಟ್ಟಿದ್ದರಿಂದ ಟೆಕ್ನಿಕಲ್ ಪ್ರಿವೀವ್ ಕೂಡ ನಡೆಯಿತು. ನನ್ನ ಮಗ ಹೀರೋ ಅಂತ ಅಲ್ಲ, ಗೋವಿಂದ ಗೋವಿಂದ ನಿಜವಾಗಲೂ ಒಂದು ಒಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಕ್ಕೂ ಹೆಚ್ಚಿನಿಂದ ಇದ್ದೀನಿ, ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ರಿಲೀಸ್ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ತಮಿಳು ಹಾಗು ಮಲಯಾಳಂ ನಲ್ಲಿ ಡಬ್ ಮಾಡಿ ರಿಲೀಸ್ ಮಾಡೋದು ಖಂಡಿತ, ಇನ್ನು ಬೇರೆ ಭಾಷೆಗಳಲ್ಲಿ ಮಾಡಬೇಕೇ ಬೇಡವೇ ಅನ್ನೋದನ್ನು ಯೋಚಿಸುತ್ತಿದ್ದೇವೆ ಎಂದು ನಿರ್ಮಾಪಕರಲ್ಲಿ ಓರ್ವರಾದ ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಹೇಳಿದರು.
ಟಿವಿ ಚಾನೆಲ್ ನವರು ಸಿನಿಮಾ ನೋಡಿ, ಒಂದು ಭಾರಿ ಮೊತ್ತಕ್ಕೆ ಗೋವಿಂದ ಗೋವಿಂದ ಚಿತ್ರದ ಸ್ಯಾಟ್ಲೈಟ್ ರೈಟ್ಸ್ ಈಗಾಗಲೇ ಕೊಂಡುಕೊಂಡಿದ್ದಾರೆ. ಒಟಿಟಿಗಳಿಂದ ಬೇಡಿಕೆ ಬಂದಿದ್ದರೂ, ಮೊದಲು ಚಿತ್ರವನ್ನು ದೊಡ್ಡ ಪರದೆ ಮೇಲೆ ರಿಲೀಸ್ ಮಾಡಿ ನಂತರ ಒಟಿಟಿಗೆ ಕೊಡುತ್ತೇವೆ ಎನ್ನುತ್ತಾರೆ ತಂಡದ ಸದಸ್ಯರು.
ಇದು ನನ್ನ ಮೊದಲ ಚಿತ್ರ. ನನ್ನ ಬ್ಯಾನರ್ ಹೆಸರು ಹಾಗೂ ನಿರ್ಮಾಪಕರ ಹೆಸರಲ್ಲಿ ದಿಗ್ಗಜರ ಜೊತೆ ನನ್ನ ಹೆಸರು ನೋಡಿ ನನಗೆ ಬಹಳ ಸಂತೋಷ ಆಯಿತು. ಒಂದು ಒಳ್ಳೆಯ ಸಿನಿಮಾದಿಂದ ನನ್ನ ಸಿನಿ ಪಯಣ ಪ್ರಾರಂಭವಾಯಿತು ಎಂದರು ನಿರ್ಮಾಪಕಕಿಶೋರ್. ಇವರು ಮಧುಗಿರಿಯ ಶಾಂತಲಾ ಚಿತ್ರಮಂದಿರದ ಮಾಲೀಕರು ಹೌದು.
ಗೋವಿಂದಗೋವಿಂದ ಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನಾ, ಕವಿತಾಗೌಡ, ರೂಪೇಶ್ ಶೆಟ್ಟಿ, ಅಚ್ಯುತ್ ಕುಮಾರ್, ಶೋಭರಾಜ್, ವಿ. ಮನೋಹರ್, ಪವನ್, ವಿಜಯ್ ಚೆಂಡೂರ್ ಹಾಗೂ ಇನ್ನಿತರ ನುರಿತ ಕಲಾವಿದರ ದಂಡೇ ಇದೆ. ನಿರ್ದೇಶಕ ತಿಲಕ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತ, ದೇವ್ ರಂಗಭೂಮಿ ಸಂಭಾಷಣೆ, ಡಾ. ಥ್ರಿಲ್ಲರ್ ಮಂಜು ಸಾಹಸ ಹಾಗೂ ಜನಾರ್ಧನ್ ರಾಮ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಎರಡು ವರ್ಷಗಳ ನಂತರ ನಾನು ಕನ್ನಡ ಸಿನಿಮಾ ಮಾಡ್ತಾ ಇದ್ದೀನಿ. ಬ್ಯುಸಿನೆಸ್ ಕಡೆ ಗಮನ ಕೊಡಲು ಚಿತ್ರರಂಗದಿಂದ ಅಲ್ಪ ವಿರಾಮ ತೆಗೆದುಕೊಂಡಿದ್ದೆ. ಇದರ ಕಥೆ ಹಾಗೂ ತಂಡ ನನಗೆ ಇಷ್ಟ ಆಯಿತು ಹಾಗಾಗಿ ಒಪ್ಪಿಕೊಂಡೆ. ರವಿ ಗರಣಿ ಅವರು ನನಗೆ ಬಹಳ ವರ್ಷಗಳಿಂದ ಪರಿಚಯ. ಅವರೇ ಈ ಸಿನಿಮಾದ ಬೆನ್ನೆಲುಬು. ಹಾಗಾಗಿ ತಂಡದ ಸದಸ್ಯರು ನನಗೆ ಹೊಸಬರಾದರೂ ಅವರ ನೇತೃತ್ವದ ಬಗ್ಗೆ ನನಗೆ ನಂಬಿಕೆ ಇದ್ದಿದ್ದರಿಂದ ಚಿತ್ರ ಮಾಡಲು ಹೆಚ್ಚು ಯೋಚಿಸದೆ ಒಪ್ಪಿಕೊಂಡೆ. ಚಿತ್ರ ನೋಡಿದ ಮೇಲೆ ಬಹಳ ಖುಷಿ ಆಗುತ್ತಿದೆ ಎಂದರು ನಾಯಕ ನಟ ಸುಮಂತ್ ಶೈಲೇಂದ್ರ.
ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಹಾಗೂ ಇನ್ನಿತರ ರಮಣೀಯ ಪ್ರದೇಶಗಳಲ್ಲಿ 60ಕ್ಕೂ ಹೆಚ್ಚು ದಿನ ಚಿತ್ರೀಕರಣ ನಡೆಸಿದ್ದಾರೆ ಚಿತ್ರತಂಡ. ಚಿತ್ರೀಕರಣಕ್ಕೆ ಅದ್ಧೂರಿಯಾಗಿ ಖರ್ಚು ಮಾಡಿದ್ದು ಪಚಾರ ಕಾರ್ಯಗಳನ್ನು ಕೂಡ ಅದ್ಧೂರಿಯಾಗಿ ಮಾಡಬೇಕೆಂದು ತಂಡ ನಿರ್ಧರಿಸಿದೆ.
ಇಂತಹ ಒಳ್ಳೆಯ ಸಿನಿಮಾ ಮಾಡಿ ಚೆನ್ನಾಗಿ ಪ್ರಚಾರ ಮಾಡದಿದ್ದರೆ ಅದು ತಪ್ಪಾಗುತ್ತೆ. ಹಾಗಾಗಿ ಭಾರೀ ಮೊತ್ತವನ್ನು ಪ್ರಚಾರ ಕಾರ್ಯಗಳಿಗೆ ನಿಗದಿ ಮಾಡಿದ್ದೇವೆ ಎನ್ನುತ್ತಾರೆ ರವಿ.ಆರ್.ಗರಣಿ. ತಮ್ಮದೇ ಸ್ವಂತ ಬ್ಯಾನರ್ ನಲ್ಲೇ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಹಿತನ್ ಸಂಯೋಜನೆಯ ಒಟ್ಟು 6 ಹಾಡುಗಳು ಹಾಗೂ ರ್ಯಾಪರ್ ಆಲ್ ಓಕೆ ಅಲೋಕ್ ಬಾಬು ಸಂಯೋಜನೆಯ ಒಂದು ಹಾಡು ಸೇರಿ 7 ಹಾಡುಗಳು ಚಿತ್ರದಲ್ಲಿವೆ. ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗುತ್ತೆ ಅನ್ನೋ ನಂಬಿಕೆ ಇರೋದರಿಂದಲೇ ಇದನ್ನ ಬೇರೆಯವರಿಗೆ ಕೊಡದೆ ನಮ್ಮದೆ ಹೊಸ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಬೇಕು ಅಂತ ನಿರ್ಧರಿಸಿದ್ದೇವೆ ಎಂದರು ಶೈಲೇಂದ್ರ ಬಾಬು.
ಅತಿ ಶೀಘ್ರದಲ್ಲೇ ಟೀಸರ್ ಟೈಲರನ್ನು ಹೆಸರಾಂತ ಸ್ಟಾರ್ ಕಲಾವಿದರಿಂದ ಬಿಡುಗಡೆ ಮಾಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಹಾಗೂ ತದನಂತರ ವಾರಕ್ಕೊಂದು ಹಾಡನ್ನು ಕೂಡ ರಿಲೀಸ್ ಮಾಡುತ್ತೇವೆ ಎಂದರು ಕಿಶೋರ್. ಇನ್ನೋರ್ವ ನಾಯಕ ನಟ ರೂಪೇಶ್, ಹೋದ ವರ್ಷ ನನ್ನ ತುಳು ಸಿನಿಮಾ ‘ಗಿರಗಿಟ್’ ಸೂಪರ್ ಹಿಟ್ ಆಯಿತು. ಈ ವರ್ಷ ‘ಗೋವಿಂದಗೋವಿಂದ’ ಸೂಪರ್ ಹಿಟ್ ಆಗುತ್ತೆ ಅನ್ನೋ ನಂಬಿಕೆ ಚಿತ್ರ ನೋಡಿದ ಮೇಲೆ ಬಲವಾಗಿ ಬಂದಿದೆ ಎಂದರು. ನಾಯಕಿಯರಾದ ಭಾವನಾ ಹಾಗೂ ಕವಿತಾ ಚಿತ್ರ ಹಾಗೂ ತಮ್ಮ ಪಾತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.
ಇದು ನನ್ನ ಮೊದಲ ಚಿತ್ರ. ಸೆನ್ಸಾರ್ ನವರೇ ಮೊದಲ ಪ್ರೇಕ್ಷಕರು. ಅವರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದಾಗ ಬಹಳ ಸಂತೋಷವಾಯಿತು. ನಂತರ ನನ್ನ ತಂಡ ಹಾಗೂ ನಿರ್ಮಾಪಕರು ಚಿತ್ರ ನೋಡಿ ಹೊಗಳಿದಾಗ ಈ ಚಿತ್ರದಿಂದ ನನಗೆ ಒಳ್ಳೆಯ ಭವಿಷ್ಯ ಸಿಗುತ್ತೆ ಎಂಬ ನಂಬಿಕೆ ಬಂದಿದೆ. ಈ ಚಿತ್ರದ ನಿರ್ದೇಶಕ ನಾನಾಗಲು ಕೇವಲ ರವಿ ಗರಣಿಯವರೇ ಕಾರಣ. ಅವರಿಗೆ ನಾನು ಚಿರಋಣಿ ಆಗಿರುತ್ತೇನೆ ಎಂದರು ನಿರ್ದೇಶಕ ತಿಲಕ್.
ಕ್ಲೀನ್ ಕಾಮಿಡಿಯ ಜೊತೆ ಮುದ ನೀಡುವ ಸಂಗೀತ, ರಮಣೀಯ ತಾಣಗಳನ್ನು ತೋರಿಸುತ್ತಾ ಮಧ್ಯಂತರದಲ್ಲಿ ರೋಚಕ ತಿರುವನ್ನು ಪಡೆದು, ಒಂದು ಹೊಸ ಅನುಭವನ್ನು ನೀಡುವ ಚಿತ್ರ ಇದಾಗಿದೆ ಎಂದರು ಜನಾರ್ಧನ್ ರಾಮ್. ಆದಷ್ಟು ಬೇಗ ಚಿತ್ರಮಂದಿರಗಳು ತೆರೆದು ಗೋವಿಂದ ಗೋವಿಂದ ಚಿತ್ರ ತೆರೆ ಕಾಣಲಿ. ಕಷ್ಟದ ಈ ಸಮಯದಲ್ಲಿ ಮನೆ ಮಂದಿಯೆಲ್ಲಾ ಒಟ್ಟಾಗಿ ಕೂತು ನಕ್ಕು ನಲಿದು ಆನಂದಿಸಲಿ ಎಂಬುದೇ ನಮ್ಮ ಆಸೆ ಎಂದರು ಚಿತ್ರತಂಡ.
News In Brief: Bhavana Menon Starrer Govinda Govinda Kannada Movie Gets U certificate from Censor Board.